ಸಿದ್ದರಾಮಯ್ಯರು ಮಂಡಿಸಿರುವ ಬಜೆಟ್ ಜನತೆಗೆ ಸರಕಾರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ
- ಪುತ್ತೂರಿನ ಜನರ ಬಹುಕಾಲದ ಬೇಡಿಕೆ ಮೆಡಿಕಲ್ ಕಾಲೇಜು ಘೋಷಣೆಗೆ ಶಾಸಕ ಮಂಜುನಾಥ ಭಂಡಾರಿ ಹರ್ಷ
ಮಂಗಳೂರು: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನೈಜ ಜನಪರ ಕಾಳಜಿಯನ್ನು ಹೊಂದಿರುವುದು ಮಾತ್ರವಲ್ಲದೆ ಜನರು ಸರಕಾರದ ಮೇಲಿಟ್ಟಿರುವ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಅದರಲ್ಲೂ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗಿರುವುದು ಅತೀವ ಹರ್ಷ ಉಂಟುಮಾಡಿದೆ“ ಎಂದು ವಿಧಾನ ಪರಿಷತ್ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಜೊತೆಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಪುತ್ತೂರಿನ ನಾಗರಿಕರು ಅನೇಕ ವರ್ಷಗಳಿಂದ ಮೆಡಿಕಲ್ ಕಾಲೇಜಿಗೆ ಬೇಡಿಕೆ ಇಡುತ್ತಾ ಬಂದಿದ್ದು ಅದು ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗುವ ಮೂಲಕ ಜನರ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ ಎಂದು ಮಂಜುನಾಥ ಭಂಡಾರಿ ಹೇಳಿದರು.
“ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನ ಆಗಿದ್ದು ಈ ಮೂಲಕ ಜನರ ವಿಶ್ವಾಸ ಉಳಿಸಿಕೊಂಡಿದೆ. ಬಜೆಟ್ ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ವೇತನ ಹೆಚ್ಚಿಸಿರುವ ಜೊತೆಗೆ ಸಾಂಕ್ರಾಮಿಕ ರೋಗಗಳ ತಡೆಗೆ 50 ಕೋಟಿಯ ವಿಶೇಷ ಅಭಿಯಾನ ಕಾರ್ಯಕ್ರಮ ನೀಡಿದ್ದಾರೆ. ಒಟ್ಟಾರೆ ರಾಜ್ಯದ ಜನರು ಮೆಚ್ಚುವ ಬಜೆಟ್ ನೀಡಿರುವ ಸಿದ್ದರಾಮಯ್ಯ ಅವರು ಈ ಮೂಲಕ ರಾಜ್ಯದ ಎಲ್ಲ ವರ್ಗದ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ“ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
”ಆರೋಗ್ಯ ಇಲಾಖೆಗೆ ಪುನಶ್ಚೇತನ ನೀಡಿರುವ ಕ್ರಾಂತಿಕಾರಿ ಬಜೆಟ್ ಇದಾಗಿದ್ದು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ 100 ಕೋಟಿ ಅನುದಾನದಲ್ಲಿ ಗೃಹ ಆರೋಗ್ಯ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಘೋಷಣೆ ಮಾಡಲಾಗಿದೆ. ತಾಯಿ ಮಗುವಿನ ಮರಣ ಪ್ರಮಾಣವನ್ನ ಶೂನ್ಯಕ್ಕಿಳಿಸಲು 320 ಕೋಟಿ ಅನುದಾನ ಯೋಜನೆ ಘೋಷಣೆ ಮಾಡಿರುವುದು ಸಿದ್ದರಾಮಯ್ಯರ ಜನಪರ ಕಾಳಜಿಗೆ ಸಾಕ್ಷಿ“ ಎಂದರು.