Home Mangalorean News Kannada News ಹಲಸಿನ ಹಣ್ಣು ಹೆಚ್ಚು ತಿಂದರೆ ಏಡ್ಸ್ ಬರುವುದಿಲ್ಲವಂತೆ- ಶಾಸಕ ರಘುಪತಿ ಭಟ್!

ಹಲಸಿನ ಹಣ್ಣು ಹೆಚ್ಚು ತಿಂದರೆ ಏಡ್ಸ್ ಬರುವುದಿಲ್ಲವಂತೆ- ಶಾಸಕ ರಘುಪತಿ ಭಟ್!

Spread the love

ಹಲಸಿನ ಹಣ್ಣು ಹೆಚ್ಚು ತಿಂದರೆ ಏಡ್ಸ್ ಬರುವುದಿಲ್ಲವಂತೆ- ಶಾಸಕ ರಘುಪತಿ ಭಟ್!

ಉಡುಪಿ: ”ಹಲಸಿನ ಹಣ್ಣು ಹೆಚ್ಚು ತಿಂದರೆ ಏಡ್ಸ್‌ನಂತಹ ಕಾಯಿಲೆಗಳು ಬರುವುದಿಲ್ಲ ಮತ್ತು ಅದನ್ನು ಬಾರದಂತೆ ತಡೆಗಟ್ಟಬಹುದು. ಈ ವಿಚಾರವನ್ನು ಕೆಲವರು ಹೇಳಿದ್ದನು ನಾನು ಕೇಳಿದ್ದೇನೆ. ಹಲಸಿನ ಕಾಯಿಯ ನಿಯಮಿತ ಸೇವನೆಯಿಂದ ಮಧುಮೇಹ ಕಾಯಿಲೆ ನಿಯಂತ್ರಣ ಸಾಧ್ಯವಾಗಲಿದ್ದು, ಹಲಸು ಬೆಳೆಯುವ ಕುರಿತಂತೆ ರೈತರು ಆಸಕ್ತಿ ತೋರಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಅವರು ಶನಿವಾರ, ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಉಡುಪಿ ಸಹಯೋಗದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಲಸು ಹೆಚ್ಚಿನ ಪರಿಶ್ರಮವಿಲ್ಲದೇ ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಬೆಳಯಾಗಿದ್ದು, ಸಮೃದ್ದವಾಗಿ ಬೆಳೆಯುವ ಹಲಸಿನಿಂದ ಹಲವು ಪ್ರಯೋಜನಗಳಿದ್ದು, ನಿರ್ಲಕ್ಷಕ್ಕೆ ಒಳಗಾಗಿದ್ದ ಹಲಸು , ಹಲಸು ಮೇಳಗಳ ಮೂಲಕ ವೈಭವೀಕರಣ ಪಡೆದಿದೆ,ಹಲಸಿನ ಕಾಯಿಯ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರಲಿದ್ದು, ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಹಲಸು ಕೃಷಿಗೆ ಹೆಚ್ಚಿನ ಉತ್ತೇಜನ ದೊರೆಯಬೇಕು ಎಂದು ರಘುಪತಿ ಭಟ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಹಲಸು ಬಹುಪಯೋಗಿಯಾಗಿದ್ದು, ಹಣ್ಣು ಸೇವನೆಗೆ ಮಾತ್ರವಲ್ಲದೇ ಮರದ ಪೀಠೋಪಕರಣ ತಯಾರಿಕೆಗೂ ಬಳಕೆಯಾಗುತ್ತಿದ್ದು, ಹಲಸಿನ ಖಾದ್ಯಗಳ ತಯಾರಿಕೆ ಕುರಿತಂತೆ ಕಾರ್ಯಾಗಾರ ಏರ್ಪಡಿಸುವ ಮೂಲಕ ಮಹಿಳೆಯರಿಗೆ ತರಬೇತಿ ನೀಡಿ, ಹಲಸಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಸಂಶೋಧನೆಗಳ ಪ್ರಕಾರ ಹಲಸು ಭವಿಷ್ಯದ ಹಣ್ಣು ಎಂದು ಪರಿಗಣಿಸಲಾಗಿದ್ದು, ಹವಾಮಾನ ವೈಪರೀತ್ಯದಿಂದ ಎಲ್ಲಾ ಹಣ್ಣುಗಳು ನಾಶವಾದರೂ ಹಲಸು ಉಳಿಯಲಿದೆ, ಹೆಚ್ಚಿನ ಸಂಖ್ಯೆಯಲ್ಲಿ ಹಲಸಿನ ಗಿಡ ನೆಟ್ಟು ಪೋಷಿಸಬೇಕು , ಜಿಲ್ಲೆಯಲ್ಲಿ ಸ್ವಚ್ಛ ಉಡುಪಿ ಮಿಷನ್ ಅಂಗವಾಗಿ, ಮನೆಗಳಿಂದ ಹೊರಹೋಗು ನೀರಿನಿಂದ ಉಂಟಾಗುವ ದ್ರವತ್ಯಾಜ್ಯ ನಿರ್ವಹಣೆಗೆ ಕೆನ್ನಾ ಗಿಡಗಳನ್ನು ನಡೆವುದರಿಂದ ತ್ಯಾಜ್ಯ ನಿರ್ವಹಣೆ ಸಾಧ್ಯವಾಗಲಿದೆ ಅಲ್ಲದೇ ಸೊಳ್ಳೆಗಳ ಉತ್ಪತ್ತಿ ಸಹ ತಡೆಯಬಹುದಾಗಿದ್ದು, ತೋಟಗಾರಿಕಾ ಇಲಾಖೆಯಿಂದ ಕೆನ್ನಾ ಗಿಡಗಳನ್ನು ಪಡೆದು ಮನೆಯ ಸುತ್ತಮುತ್ತ ನೆಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ತಾರಸಿ ತೋಟ ನಿರ್ಮಾಣ ಮಾಡುವುದರ ಮೂಲಕ, ಮನೆಯಲ್ಲಿಯೇ ಬೆಳದ ತರಕಾರಿಗಳನ್ನು ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ, ವಿದೇಶಗಳಲ್ಲಿ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ,ಆದರೆ ಭಾರತದಲ್ಲಿ ಹಲಸು ನಿರ್ಲಕ್ಷಿತ ಬೆಳೆ ಆಗಿದೆ, ರಾಜ್ಯದಲ್ಲಿ ಕೆಲವು ಭಾಗದಲ್ಲಿ ಮಾತ್ರ ಹಲಸು ಬೆಳೆಯುತ್ತಿದ್ದು, ಹಲಸಿನ ಪ್ರಾಮುಖ್ಯತೆ ಮತ್ತು ಅದರ ಉತ್ಪನಗಳ ತಯಾರಿಕೆ ಕುರಿತಂತೆ ಎಲ್ಲಡೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ.ಪಂ. ಸದಸ್ಯ ಬಾಬು ಶೆಟ್ಟಿ, ಬ್ರಹ್ಮಾವರ ಕೆವಿಕೆಯ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್, ಕೆವಿಕೆ ಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ.ಧನಂಜಯ , ಎಸ್.ಕೆ.ಡಿ.ಆರ್.ಡಿ.ಪಿ ಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲೆಲ್ಲೂ ಹಲಸು : ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಶನಿವಾರ ನಡೆದ , ಜಿಲ್ಲಾ ಮಟ್ಟದ ಹಲಸು ಮೇಳದಲ್ಲಿ ಎಲ್ಲೆಲ್ಲೂ ಹಲಸಿನ ಪರಿಮಳ ಹರಡಿತ್ತು, ಹಲಸಿನಿಂದ ತಯಾರಿಸಿದ ಹಲಸಿನ ಉತ್ಪನ್ನಗಳ ಮಾರಾಟ, ಪ್ರದರ್ಶನ, ಹಲಸಿನ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ನಡೆಯಿತು, ಹಲಸಿನಿಂದ ತಯಾರಿಸಿದ ಹಲ್ವ, ಚಿಪ್ಸ್, ಹಪ್ಪಳ, ಹಲಸಿನ ಜ್ಯೂಸ್, ಐಸ್ ಕ್ರೀಂ, ಉಪ್ಪಿನ ಕಾಯಿ , ರುದ್ರಾಕ್ಷಿ , ಚಂದ್ರಬಕ್ಕೆ, ಶಿವರಾತ್ರಿ ಹಲಸು, ಅಂಜೂರ ಹಲಸು, ಜೇನು ಬಕ್ಕೆ, ಸಿಂಗಾಪುರ , ಸಮೃದ್ದಿ, ಎ ಟು ಝಡ್ , ಸೂಪರ್ ಅರ್ಲಿ, ಥೈಲ್ಯಾಂಡ್ ಪಿಂಕ್ ಮುಂತಾದ ಹಲವು ತಳಿಯ ಹಲಸು ಗಿಡಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು.

ದೊಡ್ಡಬಳ್ಳಾಪುರ ತಾಲೂಕಿನ ತೂಬುಗೆರೆ ಹಲಸು ಬೆಳಗಾರರ ರೈತ ಸಂಘದ ವತಿಯಿಂದ ಚಂದ್ರ ಬಕ್ಕೆ, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ ಸೇರಿದಂತೆ ವಿವಿಧ ತಳಿಯ 1.5 ಟನ್ ಹಲಸನ್ನು ಈ ಮೇಳಕ್ಕೆ ತರಲಾಗಿತ್ತು, ಈ ಸಂಘದವತಿಯಿಂದ ಎಲ್ಲಾ ಹಲಸು ಮೇಳಗಳಲ್ಲಿ ಮಾರಾಟ ನಡೆಯುತ್ತಿದ್ದು, 160 ಹಲಸು ಬೆಳೆಯುವ ರೈತ ಸದಸ್ಯರಿಂದ ರಚಿತವಾಗಿರುವ ಈ ಸಂಘದ ವಾರ್ಷಿಕ ವಹಿವಾಟು 28 ಲಕ್ಷ ರೂ ಗಳಾಗಿದ್ದು, ಮಂಗಳೂರಿನಲ್ಲಿ ಐಸ್ ಕ್ರೀಂ ತಯಾರಿಕೆಗೆ ವಾರ್ಷಿಕ 80 ರಿಂದ 100 ಟನ್ ಪೂರೈಕೆ ಮಾಡುತ್ತಿದ್ದು, 12 ರಿಂದ 15 ಲಕ್ಷ ರೂ ಹಲಸು ಮಾರಾಟವಾಗಲಿದೆ, ರಾಜ್ಯ ಮಾತ್ರವಲ್ಲದೇ ಇತರೇ ರಾಜ್ಯಗಳಿಗೆ ಹಲಸಿನ ರಫ್ತು ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದರು.


Spread the love

Exit mobile version