ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ಅಂಚೆ ಚೀಟಿ ಬಿಡುಗಡೆ

Spread the love

ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ಅಂಚೆ ಚೀಟಿ ಬಿಡುಗಡೆ

ಉಡುಪಿ: ಸಂತ ಲಾರೆನ್ಸರ ಪುಣ್ಯ ಕ್ಷೇತ್ರವನ್ನು ಕ್ರಿಸ್ತ ಜಗದ್ಗುರು ಪೋಪ್ ಪ್ರಾನ್ಸಿಸ್ ಅವರು ಸಂತ ಲಾರೆನ್ಸ್ ಮಹಾದೇವಾಲಯ ವಾ ಬಸಿಲಿಕ ಎಂದು ಅಧಿಕೃತ ಘೋಷಣೆ ಮಾಡಿದ ಸವಿನೆನೆಪಿಗಾಗಿ ಭಾರತ ಸರ್ಕಾರದ ಅಂಚೆ ಇಲಾಖೆ ಸಂತ ಲಾರೆನ್ಸ್ ಪವಾಡ ಮೂರ್ತಿಯಿರುವ 5 ರೂಪಾಯಿಯ ವಿಶೇಷ ಅಂಚೆ ಚೀಟಿ ಹಾಗೂ ಅಂಚೆ ಲಕೋಟೆಯನ್ನು ಗುರುವಾರ ಅತ್ತೂರು ಸಂತ ಲಾರೆನ್ಸರ ಸಭಾ ಭವನದಲ್ಲಿ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.

ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಜೆರಾಲ್ಡ್ ಐಸಕ್ ಲೋಬೊ, ಬೆಂಗಳೂರಿನ ದಕ್ಷಿಣ ಕರ್ನಾಟಕ ವಲಯ ಐಪಿಒಎಸ್ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಹಾಗೂ ಸಂತ ಲಾರೆನ್ಸ್ ಮಹಾದೇವಾಲಯದ ರೆಕ್ಟರ್ ವಂ ಜೋರ್ಜ್ ಡಿಸೋಜಾ ಅವರು ಜಂಟಿಯಾಗಿ ವಿಶೇಷ ಅಂಚೆ ಚೀಟಿ ಹಾಗೂ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು.

ಅತ್ತೂರು ಸಂತ ಲಾರೆನ್ಸ್‌ ಬಾಸಿಲಿಕಾ ಹಾಗೂ ಪವಾಡ ಮೂರ್ತಿಯ ವಿಶೇಷ ಕವರ್‌ ಹಾಗೂ ಬಸಿಲಿಕಾ ಲಾಂಛನದ ಕ್ಯಾನ್ಸಲೇಶನ್‌(ಮೊಹರು) ಬಿಡುಗಡೆಯಾಗಲಿದ್ದು, ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿದೆ. ಅಂಚೆ ಲಕೋಟೆಗೆ ಬಳಸಬಹುದಾದ ಸಂತ ಲಾರೆಸ್ಸ್‌ ಬಸಿಲಿಕಾ ಮತ್ತು ಪವಾಡ ಮೂರ್ತಿಯ ಭಾವಚಿತ್ರವುಳ್ಳ ಮೈ ಸ್ಟ್ಯಾಂಪ್‌ (5 ರೂ. ಅಂಚೆ ಚೀಟಿ) ಕೂಡ ಈ ಸಂದರ್ಭ ಬಿಡುಗಡೆಯಾಗಲಿದ್ದು ಅಂಚೆ ಕಚೇರಿಗಳಲ್ಲಿ ದೊರೆಯಲಿದೆ.

ಉಡುಪಿ ಕಾರ್ಪೊರೇಷನ್‌ ಬ್ಯಾಂಕ್‌ ಪ್ರಾಚೀನ ವಸ್ತು ಸಂಗ್ರಹಾಲಯದ  ಕ್ಯುರೇಟರ್‌ ಎಂ.ಕೆ. ಕೃಷ್ಣಯ್ಯ, ಬಾಸಿಲಿಕಾದ ಸಹಾಯಕ ಧರ್ಮಗುರು ವಂ. ಜಾನ್ಸಿಲ್ ಆಲ್ವಾ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ, ಚಾನ್ಸಲರ್ ವಂ ವಲೇರಿಯನ್ ಮೆಂಡೊನ್ಸಾ ಮತ್ತಿತರು ಉಪಸ್ಥಿತರಿದ್ದರು.


Spread the love