ಕೋಟ ಡಬಲ್ ಮರ್ಡರ್ ; ಜಿಪಂ ಸದಸ್ಯ ಸೇರಿ ಆರು ಮಂದಿ ಆರೋಪಿಗಳಿಗೆ ಎಂಟು ದಿನ ಪೊಲೀಸ್ ಕಸ್ಟಡಿ

Spread the love

ಕೋಟ ಡಬಲ್ ಮರ್ಡರ್ ; ಜಿಪಂ ಸದಸ್ಯ ಸೇರಿ ಆರು ಮಂದಿ ಆರೋಪಿಗಳಿಗೆ ಎಂಟು ದಿನ ಪೊಲೀಸ್ ಕಸ್ಟಡಿ

ಉಡುಪಿ: ಉಡುಪಿ ಜಿಲ್ಲೆ ಕೋಟದಲ್ಲಿ ನಡೆದ ಸ್ನೇಹಿತರಿಬ್ಬರ ಕೊಲೆ ಪ್ರಕರಣದಲ್ಲಿ ಬಂಧಿತರಾದ ಜಿಪಂ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಶುಕ್ರವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ತನಿಖಾಧಿಕಾರಿ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದ ತಂಡ ರೌಡಿಶೀಟರ್ ಹರೀಶ್ ರೆಡ್ಡಿ , ರಾಜಶೇಖರ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ, ರವಿ ಯಾನೆ ಮೆಡಿಕಲ್ ರವಿ, ಕೋಟ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಇವರುಗಳನ್ನು ಬಿಗಿ ಭದ್ರತೆಯಲ್ಲಿ ಕುಂದಾಪುರ ಹೆಚ್ಚುವರಿ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹಾಜರುಪಡಿಸಿದರು.

ಆರೋಪಿಗಳನ್ನು ವಿಚಾರಣೆ ನಡೆಸಿದ ಎಡಿಶನಲ್ ಜೆ ಎಮ್ ಎಫ್ ಸಿ ನ್ಯಾಯಾಧಿಶ ಶ್ರೀಕಾಂತ್ ಅವರು ಆರೋಪಿಗಳಿಗೆ ಫೆಬ್ರವರಿ 15 ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದರು.

ಶೌಚಾಲಯದ ಪಿಟ್‌ ನಿರ್ಮಾಣ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸ್ನೇಹಿತ ಕರೆದನೆಂದು ಕೋಟ ಸಮೀಪದ ಕಾರ್ತಟ್ಟು ಚಿತ್ರಪಾಡಿಯ ಯತೀಶ್‌ ಕಾಂಚನ್‌, ಕೋಟ ಬಾರಿಕೆರೆ ನಿವಾಸಿ ಭರತ್‌ ಶ್ರೀಯಾನ್‌ ಸ್ಥಳಕ್ಕೆ ತೆರಳಿದ್ದು, ಆ ಸಂದರ್ಭ ರಾಜಶೇಖರ ರೆಡ್ಡಿ, ಚಂದ್ರಶೇಖರ ರೆಡ್ಡಿ ಹಾಗೂ ಇತರ ನಾಲ್ವರು ಇವರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

ಹಂತಕರ ಬಂಧನಕ್ಕೆ ಆಗ್ರಹಿಸಿ ಸಾರ್ವಜನಿಕರು ಇವರಿಬ್ಬರ ಶವವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದರು. ತದನಂತರ ಆರೋಪಿಗಳ ಬಂಧನ ವಿಳಂಬವಾದ ಬಗ್ಗೆ ನಾನಾ ಸಂಘಟನೆಗಳ ನೇತೃತ್ವದಲ್ಲಿ ಸ್ವಯಂಪ್ರೇರಿತ ಕೋಟ ಬಂದ್‌ ಕೂಡ ನಡೆದಿತ್ತು.

ಯತೀಶ್ ಮತ್ತು ಭರತ್ ಅವರ ಕೊಲೆ ಕೇವಲ ಶೌಚಲಯ ನಿರ್ಮಾಣ ವಿವಾದಕ್ಕೆ ಸೀಮಿತವಾಗಿರದೆ ವೈಯುಕ್ತಿಕ ದ್ವೇಷದ ಕಾರಣದಿಂದಾಗಿ ಕೊಲೆ ನಡೆದಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.


Spread the love