ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ದ.ಕ.ಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಸಿಎಂ ಸಿದ್ದರಾಮಯ್ಯನವರಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಒತ್ತಾಯ

Spread the love

ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ದ.ಕ.ಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಸಿಎಂ ಸಿದ್ದರಾಮಯ್ಯನವರಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಒತ್ತಾಯ

ಮಂಗಳೂರು: ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ (ಜಿ‌ಐ‌ಎಮ್- investment karnataka 2025) ಆರಂಭಗೊಂಡಿದ್ದು, ಈ ಬಾರಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದ ಕ್ಯಾ. ಬ್ರಿಜೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ಆರ್ಥಿಕ ಸುಸ್ಥಿರ ಬೆಳವಣಿಗೆಗೆ ಪೂರಕವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸಿರುವ ಕ್ಯಾ. ಚೌಟ, ಹೆಚ್ಚಿನ ಉದ್ಯಮಶೀಲತಾ ಕೌಶಲ್ಯ, ನುರಿತ ಮಾನವ ಸಂಪತ್ತು, ವಿಶ್ವದರ್ಜೆ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಕರಾವಳಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಭೌಗೋಳಿಕ ಆಕರ್ಷಣೆ, ಅತ್ಯುತ್ತಮ ಬಂದರು ಸಂಪರ್ಕ, ಬಲಿಷ್ಠ ಮೂಲಸೌಕರ್ಯ ಹೊಂದಿರುವ ಕಾರಣ ಈ ಭಾಗದಲ್ಲಿ ಸಂಶೋಧನೆ & ಅಭಿವೃದ್ಧಿ(ಆರ್&ಡಿ), ಮಾಹಿತಿ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಸಾಗರ ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಆದರೆ, ಈ ಪ್ರದೇಶವು ಯುವಕರಲ್ಲಿ ನಿರುದ್ಯೋಗ ಸಮಸ್ಯೆ, ಕೌಶಲ್ಯಪೂರ್ಣ ಪ್ರತಿಭೆಗಳ ವಲಸೆ ಮತ್ತು ಸೀಮಿತ ದೊಡ್ಡ ಪ್ರಮಾಣದ ಕೈಗಾರಿಕಾ ಹೂಡಿಕೆಗಳು ಸೇರಿದಂತೆ ಕೆಲವೊಂದು ಸವಾಲು ಕೂಡ ಎದುರಿಸುತ್ತಿವೆ. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಲಭ್ಯವಿರುವ ಪರಿಸರ ಸ್ನೇಹಿ ವಾತಾವರಣ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಈ ಬಾರಿಯ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಜಿಲ್ಲೆಗೆ ದೊಡ್ಡ ಪ್ರಮಾಣದ ಹೂಡಿಕೆ ಹರಿದು ಬರುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಕ್ಯಾ. ಚೌಟ ಅವರು ಕೋರಿದ್ದಾರೆ.

ಕರಾವಳಿ ಭಾಗದಲ್ಲಿ ಎನ್ಐಟಿಕೆ, ಮಣಿಪಾಲ್ನಂತ ಸಂಸ್ಥೆಗಳು ಪ್ರತಿಭಾನ್ವಿತ ನುರಿತ ಮಾನವ ಸಂಪತ್ತನ್ನು ತಯಾರಿಸುತ್ತಿದ್ದು, ಇಲ್ಲಿ ಜಿಸಿಸಿ, ಆರ್&ಡಿ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಬಹುದು. ಆ ಮೂಲಕ, ಸೂಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಪ್ರತಿಭಾ ಪಲಾಯನವನ್ನು ತಡೆಗಟ್ಟಬಹುದು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಮಂಗಳೂರಿನಲ್ಲಿ ತಂತ್ರಜ್ಞಾನ ನಾವೀನ್ಯತೆಯ ಪಾರ್ಕ್ ಸ್ಥಾಪಿಸುವ ಮೂಲಕ ಹೂಡಿಕೆದಾರರನ್ನು ಉತ್ತೇಜಿಸಬೇಕು. ಜತೆಗೆ ನವ ಮಂಗಳೂರು ಬಂದರಿನ ಅಭಿವೃದ್ಧಿ ಹಾಗೂ ಜಾಗತಿಕ ವ್ಯಾಪಾರ ಮತ್ತು ಉತ್ಪಾದನಾ ಕೈಗಾರಿಕೆಗಳನ್ನು ಆಕರ್ಷಿಸುವುದಕ್ಕೆ ಸಮಗ್ರ ಕರಾವಳಿ ಆರ್ಥಿಕ ವಲಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಪರಿಚಯಿಸಬೇಕೆಂದು ಕ್ಯಾ. ಚೌಟ ಅವರು ಸಲಹೆ ನೀಡಿದ್ದಾರೆ.

ಮಂಗಳೂರು ವಿಶಾಲ ಕಡಲತೀರ ಹೊಂದಿರುವ ಹಿನ್ನೆಲೆಯಲ್ಲಿ ನೀಲಿ ಆರ್ಥಿಕತೆ ಮತ್ತು ಸಾಗರ ಜೈವಿಕ ತಂತ್ರಜ್ಞಾನಗಳ ಉತ್ತೇಜನಕ್ಕೆ ಕರಾವಳಿ ಭಾಗದ ಸಮುದಾಯಗಳಿಗೆ ದೀರ್ಘಾವಧಿಯ ಉದ್ಯೋಗ ಒದಗಿಸುವ ಸುಸ್ಥಿರ ಮೀನುಗಾರಿಕೆ, ಸಮುದ್ರ ಸಂಶೋಧನೆ-ಸಾಗರ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆ ಪ್ರೋತ್ಸಾಹಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಕೋ-ಟೂರಿಸಂ ಹಾಗೂ ಆತಿಥ್ಯ ವಲಯದಲ್ಲಿ ಬಂಡವಾಳ ಆಕರ್ಷಿಸಲು ಎಡ್ವಂಚರ್ಸ್ ಟೂರಿಸಂನಂಥ ಪ್ರವಾಸಿ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಇಲ್ಲಿನ ಕೈಗಾರಿಕಾ ವಲಯಗಳ ಸಾರಿಗೆ-ವಿದ್ಯುತ್ ಸಂಪರ್ಕ ಉತ್ತಮಪಡಿಸುವ ಮೂಲಕ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಕರಾವಳಿ ಭಾಗವನ್ನು ಬಂಡವಾಳ ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿ ಮಾರ್ಪಡಿಸಬಹುದು. ಒಟ್ಟಾರೆ ದಕ್ಷಿಣ ಕನ್ನಡಕ್ಕೆ ಈ ಬಾರಿಯ ʼಜಿಮ್ʼನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಲು ಎಲ್ಲ ರೀತಿಯ ಕ್ರಮ ತಮ್ಮ ನಾಯಕತ್ವದ ಸರ್ಕಾರ ತೆಗೆದುಕೊಳ್ಳಬೇಕೆಂದು ಸಂಸದ ಕ್ಯಾ. ಚೌಟ ಅವರು ಸಿದ್ದರಾಮಯ್ಯನವರಿಗೆ ಬರೆದಿರುವ ಸುಧೀರ್ಘ ಪತ್ರದಲ್ಲಿ ವಿನಂತಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments