ಪರೀಕ್ಷೆಗೆ ಹೆದರಿ ಊರು ಬಿಟ್ಟನೆ ದಿಗಂತ್? ಪೊಲೀಸರ ತನಿಖೆಯಿಂದ ಹಲವು ವಿಚಾರಗಳು ಬಹಿರಂಗ
ಮಂಗಳೂರು: ನಿಗೂಢವಾಗಿ ನಾಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ಪರೀಕ್ಷೆಗೆ ಹೆದರಿದ್ದ ಎಂಬ ಮಾತು ಕೇಳಿ ಬರುತ್ತಿದೆ.
ನಗರದ ಕಪಿತಾನಿಯೋದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್ ಪರೀಕ್ಷೆಗೆ ಹೆದರಿದ್ದ ಎನ್ನಲಾಗಿದೆ. ಶನಿವಾರ ಸಂಜೆ ತನ್ನ ತಾಯಿಗೆ ಫೋನ್ ಕರೆ ಮಾಡಿ ನಾನು ಉಡುಪಿಯಲ್ಲಿದ್ದೇನೆ. ನಾನೇನು ಓಡಿ ಹೋಗೋ ಹುಡುಗ ಅಲ್ಲ, ನನ್ನನ್ನು ಯಾರೋ ಹೊತ್ತುಕೊಂಡು ಹೋಗಿದ್ದಾರೆ. ಎಲ್ಲವನ್ನೂ ನಾನು ಬಂದು ಹೇಳ್ತೇನೆ ಎನ್ನುತ್ತಾ ಕರೆ ಕಡಿತಗೊಳಿಸಿದ್ದ.
ಆ ಬಳಿಕ ಪೊಲೀಸರು ದಿಗಂತ್ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಪರೀಕ್ಷೆಗೆ ಹೆದರಿ ಊರು ಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದನಲ್ಲದೆ ಕಳೆದ 12 ದಿನದಿಂದ ತಾನು ಎಲ್ಲೆಲ್ಲಿಗೆ ಹೋಗಿದ್ದೆ ಎಂಬುದನ್ನು ವಿವರಿಸಿರುವುದಾಗಿ ತಿಳಿದು ಬಂದಿದೆ.
ಫೆ.25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿದ್ದ ದಿಗಂತ್ ತನ್ನ ಚಪ್ಪಲಿಯನ್ನು ರೈಲ್ವೆ ಹಳಿಯ ಬಳಿ ಕಳಚಿಟ್ಟಿದ್ದ. ಅಲ್ಲದೆ ಮೂರು ಹನಿ ರಕ್ತವನ್ನು ಅದರ ಮೇಲೆ ಸುರಿದಿದ್ದ. ತನ್ನ ಸ್ನೇಹಿತನಿಂದ ಮೊದಲೇ ಪಡೆದಿದ್ದ ಶೂವನ್ನು ಧರಿಸಿ ಫರಂಗಿಪೆಟೆಯಿಂದ ಅರ್ಕುಳದವರೆಗೆ ರೈಲ್ವೆ ಹಳಿಯಲ್ಲೇ ನಡೆದುಕೊಂಡು ಹೋಗಿದ್ದ. ಬಳಿಕ ಅದೇ ದಾರಿಯಾಗಿ ಬಂದ ಬೈಕೊಂದಕ್ಕೆ ಏರಿದ್ದ. ನಂತರ ಬಸ್ಸಿನಲ್ಲಿ ಶಿವಮೊಗ್ಗ ಮತ್ತು ಅಲ್ಲಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಮೈಸೂರಿನಿಂದ ಕೆಂಗೇರಿಗೆ ತೆರಳಿದ್ದ. ನಂತರ ನಂದಿಹಿಲ್ಸ್ಗೆ ಹೋಗಿದ್ದ. ಅಲ್ಲಿ ಎರಡು ದಿನ ಏನೋ ಕೆಲಸ ಮಾಡಿ ಬಳಿಕ ಮೈಸೂರಿಗೆ ಬಂದಿದ್ದ. ಅಲ್ಲಿಂದ ಉಡುಪಿಗೆ ಶನಿವಾರ ಬೆಳಗ್ಗೆ ಹೋಗಿದ್ದ ಎನ್ನಲಾಗಿದೆ.
ಹೀಗೆ ರೈಲಿನಲ್ಲಿ ಉಡುಪಿ ಕಡೆಗೆ ಹೋಗುವಾಗ ಫರಂಗಿಪೇಟೆಯ ತನ್ನ ಮನೆಯ ಸುತ್ತಮುತ್ತ ಪೊಲೀಸರ ಸಹಿತ ಸಾರ್ವಜನಿಕರು ಇರುವುದನ್ನೂ ಕೂಡ ದಿಗಂತ್ ಗಮನಿಸಿದ್ದಾನೆ ಎಂದು ಆತ ಪೊಲೀಸರ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅಪರಾಹ್ನದ ವೇಳೆಗೆ ವಿಪರೀತ ಹಸಿವಾದ ಕಾರಣ ಉಡುಪಿಯ ಡಿಮಾರ್ಟ್ಗೆ ತೆರಳಿ ಅಲ್ಲಿಂದ ಬಿಸ್ಕೆಟ್ ಖರೀದಿಸಿ ಹೊರಬರುವಾಗ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿರುವುದಾಗಿ ತಿಳಿದು ಬಂದಿದೆ.
ದಿಗಂತ್ ಪತ್ತೆಗಾಗಿ ಮನೆಮಂದಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಕಾರಣ ಪೊಲೀಸರು ಆತನನ್ನು ಹೈಕೋರ್ಟ್ಗೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.