ಬಜೆಟ್: ಸರಕಾರದ ಮುಸ್ಲಿಮ್ ಕಡೆಗಣನೆ: ಪಾಪ್ಯುಲರ್ ಫ್ರಂಟ್

Spread the love

ಬಜೆಟ್: ಸರಕಾರದ ಮುಸ್ಲಿಮ್ ಕಡೆಗಣನೆ: ಪಾಪ್ಯುಲರ್ ಫ್ರಂಟ್

ಇತ್ತೀಚೆಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್‍ನಲ್ಲಿ ರಾಜ್ಯದ ಎರಡನೇ ಅತೀ ದೊಡ್ಡ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸಿದ್ದನ್ನು ಪಾಪ್ಯುಲರ್ ಫ್ರಂಟ್ ರಾಜ್ಯಾದ್ಯಕ್ಷ ಮುಹಮ್ಮದ್ ಸಾಕಿಬ್ ಖಂಡಿಸಿದ್ದಾರೆ. ಅದರೊಂದಿಗೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ನಿರಾಕರಣೆ, ನೀಟ್‍ನಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಅವಕಾಶ ವಂಚನೆಯೂ ನಡೆದಿದೆ. ಇವೆಲ್ಲವೂ ಸರಕಾರದ ಮುಸ್ಲಿಮ್ ವಿರೋಧಿ ನಿಲುವನ್ನು ಎತ್ತಿ ತೋರಿಸುತ್ತಿದೆ. ಕೆಲವೊಂದು ಜೆ.ಡಿ.ಎಸ್ ವರಿಷ್ಠರು “ಮುಸ್ಲಿಮರು ನಮಗೆ ಓಟು ನೀಡಿಲ್ಲ, ಆದುದರಿಂದ ನಮಗೆ ಅವರ ಮುಲಾಜು ಇಲ್ಲ” ಎಂದು ಹೇಳಿರುವುದರ ಪರಿಣಾಮ ಇದೀಗ ಬಜೆಟ್ ವೇಳೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

ಜಾತ್ಯತೀತ ಜನತಾದಳದ ಗೆಲುವಿನಲ್ಲಿ ಮುಸ್ಲಿಮರ ಮತಗಳಿದ್ದವು ಅನ್ನೋದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮರೆಯಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಕಾರವು ರಾಜಧರ್ಮವನ್ನು ಪಾಲಿಸಬೇಕು ಮತ್ತು ಬದ್ಧತೆಯನ್ನು ತೋರಬೇಕು. ಎಂದೂ ಕೋಮುವಾದಿಗಳ ಪರವಾಗಿ ನಿಲ್ಲದ ರಾಜ್ಯದ ಮುಸ್ಲಿಮರ ದೃಢ ನಿಲುವಿನಿಂದಲೇ ಇಂದು ಕಾಂಗ್ರೆಸ್ – ಜೆ.ಡಿ.ಎಸ್‍ಗೆ ಸರಕಾರವನ್ನು ರಚಿಸಿ ಅಧಿಕಾರವನ್ನು ಅನುಭವಿಸಲು ಸಾಧ್ಯವಾಗಿದೆ. ನಿರ್ಣಾಯಕ ಮುಸ್ಲಿಮ್ ಮತಗಳೇ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ – ಜನತಾದಳವನ್ನು ಗೆಲ್ಲಿಸಿತು ಅನ್ನೋದರಲ್ಲಿ ಎರಡು ಮಾತಿಲ್ಲ. ಹೀಗಿದ್ದೂ ಮುಸ್ಲಿಮ್ ಸಮುದಾಯದ ಕಡೆಗಣನೆ ರಾಜ್ಯ ಸರಕಾರಕ್ಕೆ ಶೋಭೆ ತರುವಂತದ್ದಲ್ಲ. ಆದ್ದರಿಂದ ಸರಕಾರದ ತಪ್ಪು ತೀರ್ಮಾನದಿಂದ ಹಿಂಜರಿದು ಮುಸ್ಲಿಮ್ ಸಮುದಾಯದ ಅಭಿವದ್ಧಿಯಲ್ಲಿ ಸಮಾನ ಅವಕಾಶವನ್ನು ಒದಗಿಸಬೇಕು. ಪ್ರಾಧ್ಯಾಪಕ ನೇಮಕಾತಿಯಲ್ಲಿ ಮುಸ್ಲಿಮರ ಪ್ರಾತಿನಿಧ್ಯವನ್ನು ಖಾತರಿಪಡಿಸಬೇಕು. ನೀಟ್‍ನಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಿ ಸರಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅಲ್ಪಸಂಖ್ಯಾತರ ಎಲ್ಲಾ ರೀತಿಯ ಅವಕಾಶ ವಂಚನೆಯನ್ನು ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ.


Spread the love