ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದು-  ಭೋಜೇಗೌಡ 

Spread the love

ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದು-  ಭೋಜೇಗೌಡ 

ಮಂಗಳೂರು :  ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದು. ಅಂತಹ ಶಿಕ್ಷಕರನ್ನು ಪೂಜಿಸುವ ದಿನವಿದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ನುಡಿದರು.

ಅವರು ಗುರುವಾರ ಮಂಗಳೂರು ಉತ್ತರ ವಲಯ ಶಿಕ್ಷಕರ ದಿನಾಚರಣಾ ಸಮಿತಿ ಆಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯನ್ನು ಸಂತ ಅಲೋಶಿಯಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಒಬ್ಬ ವಿದ್ಯಾರ್ಥಿಯ ಉತ್ತಮ ಭವಿಷ್ಯದ ಹಿಂದೆ ಒಬ್ಬ ಉತ್ತಮ ಶಿಕ್ಷಕನಿರುತ್ತಾನೆ, ಆದ್ದರಿಂದ ರಾಜಕಾರಣಿಗಳಿಗೆ ದೊರೆಯುವ ಸೌಲಭ್ಯಗಳು ಶಿಕ್ಷಕರಿಗೂ ದೊರೆಯುವಂತಾಗಬೇಕು ಮತ್ತು ಸರಿಯಾದ ಸಮಯದಲ್ಲಿ ಶಿಕ್ಷಕನಿಗೆ ಬೇಕಾದ ಮೂಲ ಸೌಕರ್ಯಗಳು ದೊರಕುವಂತಾಗಲಿ ಈ ನಿಟ್ಟಿನಲ್ಲಿ ನಾನು ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇನೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಪಿ.ಎಲ್. ಧರ್ಮ ಅವರು ತಮ್ಮ ದಿಕ್ಸೂಚಿ ಮಾತುಗಳಲ್ಲಿ ಈ ದಿನಾಚರಣೆಯಿಂದ ಪ್ರತಿಯೊಬ್ಬ ಶಿಕ್ಷಕನ ಆತ್ಮ ಪರಿಶೋಧನೆ ಆಗಬೇಕಾಗಿದೆ, ಏಕೆಂದರೆ ಶಿಕ್ಷಕನಾಗಿ ನಾವು ಏನ್ನನ್ನು ಮಾಡಿದ್ದೇವೆ ಎಂಬುದು ಮುಖ್ಯ. ನಮ್ಮ ನಡೆ, ನುಡಿ ಹಾಗೂ ವಿಚಾರಗಳನ್ನು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ ಹಾಗಾಗಿ ಪ್ರತಿಯೊಂದು ಕಾರ್ಯವನ್ನು ತುಂಬಾ ಜಾಗರೂಕತೆಯಿಂದ ಮಾಡಬೇಕಾಗಿದೆ. ನಿಮ್ಮಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಮೌಲ್ಯದ ಶಿಕ್ಷಣವನ್ನು ನೀಡಿ ಮೌಲ್ಯದ ಶಿಕ್ಷಣ ಎಂದರೆ ಸಮಾನತೆ, ಸ್ವಾತಂತ್ರ್ಯ, ಭಾವೈಕ್ಯತೆ, ಸ್ನೇಹಸೌಹಾರ್ದ, ದೇಶಪ್ರೇಮದ ಶಿಕ್ಷಣದ ಅಗತ್ಯವಿದೆ. ಜೊತೆಗೆ ಇತ್ತೀಚಿನ ರಾಜಕೀಯ ವಿಧ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮುಖ್ಯ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ರಾಜಕೀಯ ವಿಷಯಗಳನ್ನು ತಿಳಿದುಕೊಂಡರೆ ಮಾತ್ರ ದೇಶದ ವ್ಯವಸ್ಥೆ ಅರ್ಥವಾಗುತ್ತದೆ. ನನ್ನ ಒಬ್ಬ ವಿದ್ಯಾರ್ಥಿ ಕೋಮುವಾದಿ, ಭ್ರಷ್ಟ ಅಧಿಕಾರಿ, ಮತ್ತು ದೇಶದ್ರೋಹಿ ಆಗಬಾರದು ಎಲ್ಲರನ್ನೂ ಪ್ರೀತಿಸುವ ಮನಸ್ಸುಳ್ಳವ ಮಾನವೀಯತೆ ಮೆರೆಯುವ ಉತ್ತಮ ನಾಗರಿಕನಾಗಬೇಕು ಎನ್ನುವುದು ನನ್ನ ಮಹದಾಸೆಯಾಗಿದೆ ಎಂದು ಶಿಕ್ಷರನ್ನು ಉದ್ದೇಶಿಸಿ ಹೇಳಿದರು.

ಇದೇ ಸಂದರ್ಭದಲ್ಲಿ ಶಿಕ್ಷಕ ವೃತ್ತಿಯಲ್ಲಿ ಹಲವಾರು ವರ್ಷಗಳು ಸೇವೆಸಲ್ಲಿಸಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಪಂಚಾಯತ್, ಅಧ್ಯಕ್ಷರಾದ ಮೊಹಮ್ಮದ್ ಮೋನು ವಹಿಸಿದ್ದರು, ಸಂತ ಅಲೋಶಿಯಸ್ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪಾ| ಜೆರಾಲ್ಡ್ ಫುರ್ಟಾಡೊ ಎಸ್.ಜೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಶೆಟ್ಟಿ ಸಮನ್ವಯಾಧಿಕಾರಿ ಶಂಕ್ರಪ್ಪ ಮುದ್ನಾಳ್ ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳು, ನಿವೃತ್ತ ಶಿಕ್ಷಕ, ಶಿಕ್ಷಕಿಯರು, ಮಂಗಳೂರು ಉತ್ತರ ವಲಯದ ಶಿಕ್ಷಕರು ಭಾಗವಹಿಸಿದ್ದರು.


Spread the love