ಸುರತ್ಕಲ್: ಮುಮ್ತಾಝ್ ಅಲಿ ನೊಂದ ಅಭಿಮಾನಿ ಬಳಗ ನೇತೃತ್ವದಲ್ಲಿ ಪ್ರತಿಭಟನೆ

Spread the love

ಸುರತ್ಕಲ್: ಮುಮ್ತಾಝ್ ಅಲಿ ನೊಂದ ಅಭಿಮಾನಿ ಬಳಗ ನೇತೃತ್ವದಲ್ಲಿ ಪ್ರತಿಭಟನೆ

ಸುರತ್ಕಲ್: ಮುಮ್ತಾಝ್ ಅಲಿ ನೊಂದ ಅಭಿಮಾನಿ ಬಳಗ ಸುರತ್ಕಲ್ ಇದರ ನೇತೃತ್ವದಲ್ಲಿ ನಿಧನರಾದ ಮುಮ್ತಾಝ್ ಅಲಿ ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬಂಧಿತರಿಗೆ ಕಠಿಣ ಶಿಕ್ಷೆ ಕೊಡಸಬೇಕು ಮತ್ತು ಇದರ ಹಿಂದಿ ರುವ ಕಾಣದ ಕೈಗಳನ್ನು ಬಂಧಿಸಿ ಹನಿಟ್ರ್ಯಾಪ್ ದಂಧೆ ಕೊನೆಗಾಣಿಸಬೇಕೆಂದು ಆಗ್ರಹಿಸಿ ಗುರುವಾರ ಸುರತ್ಕಲ್ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರು, ಮುಮ್ತಾಝ್ ಅಲಿ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಸತ್ತಾರ್ ಎಂಲ್ಲಿಂದಲೋ ಬಂದು ಸುರತ್ಕಲ್ ನಲ್ಲಿ ನೆಲೆ ಕಂಡುಕೊಂಡವ. ಈತ ಮೈನ್ಸ್, ಮಹಿಳೆಯರ ದಂಧೆ, ಮರಳು ದಂಧೆಯಂತಹಾ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗುವುದು ತಿಳಿದಿದ್ದರೂ ಸಮುದಾಯ ಆತನಿಗೆ ಸ್ಥಾನ ಮಾನ ನೀಡಿರುವುದು ತಪ್ಪು. ಮುಮ್ತಾಝ್ ಅಲಿ ಕುಟುಂಬದೊಂದಿಗೆ ಇದ್ದು, ಅವರನ್ನೇ ಇಂತಹಾ ಕುಕೃತ್ಯಕ್ಕೆ ಗುರಿಯಾಗಿಸಿ ಬಲಿ ಪಡೆದುಕೊಂಡಿರುವ ಆತನಿಗೆ ಸಮುದಾಯವೇ ಶಿಕ್ಷೆ ನೀಡಬೇಕಿದೆ. ಆತನನ್ನು ಊರಿನಿಂದಲೇ ಬಹಿಷ್ಕರಿಸಬೇಕು, ಈತ ಮತ್ತು ಆತನ ಗ್ಯಾಂಗ್ ಮುಮ್ತಾಝ್ ಅಲಿ ಅವರನ್ನು ಒಂದು ವರ್ಷದಿಂದ ಮಾನಸಿಕವಾಗಿ ಕೊಲೆ ಮಾಡುತ್ತಲೇ ಬಂದು ಶನಿವಾರ ದೈಹಿಕವಾಗಿ ಕೊಲೆಗೈದಿದೆ. ಈತನಿಂದಾಗಿ ಮುಸ್ಲಿಂ ಸಮುದಾಯದ ಅನೇಕ ಮಹಿಳೆಯರು, ಯುವತಿಯರು ಮಾನಸಿಕ, ದೈಹಿಕ ಕಿರುಕುಳ ಅನುಭವಿಸಿದ್ದಾರೆ. ಅವರು ಮಾನಮರ್ಯಾದೆಗೆ ಅಂಜಿ ಸಮಾಜಕ್ಕೆ ಹೇಳಿಕೊಂಡಿಲ್ಲ ಎಂದು ಆಕ್ರೋಶ ವ್ಯಕಡಿಸಿದರು.

ಮುಮ್ತಾಝ್ ಅಲಿ ಅಸಹಜ ಸಾವಿನ ಕುರಿತಾದ ಹೋರಾಟ ಇಂದಿಗೆ ಮುಗಿಯಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾ ಗುವವವರೆಗೂ ಹೋರಾಟ ಮುಂದುವರಿಸಬೇಕು ಎಂದ ಅವರು, ಈ ಕುರಿತ ಎಲ್ಲಾ ಹೋರಾಟಗಳಲ್ಲೂ ನಾನು ಭಾಗವಹಿ ಸಲಿದ್ದೇನೆ. ಜೊತೆಗೆ ಮುಂದಿನ ದಿನಗಳಲ್ಲಿ ಕಾಮುಕ ಸತ್ತಾರ್ ನ ಒಂದೊಂದೇ ಕರ್ಮಕಾಂಡಗಳನ್ನು ಜನರ ಮುಂದೆ ಇಡಲಿದ್ದೇನೆ ಎಂದು ನುಡಿದರು.

ಬಳಿಕ ಮಾತನಾಡಿದ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಪರಂಗಿಪೇಟೆ, ಮುಮ್ತಾಝ್ ಅಲಿ ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಲು ಮತ್ತು ಅವರ ಕೊಲೆಗೆ ಪ್ರೇರಣೆಯಾದವರಿಗೆ ಕಠಿಣ ಸಜೆ ಆಗಬೇಕೆಂದು ಈ ಹೋರಾಟ ನಡೆಸಲಾಗುತ್ತಿದೆ. ಅಲಿ ಅವರನ್ನು ಜೀವಿಸಲಿ ಅವಕಾಶ ನೀಡದೆ ಕಾಡಿದ ಕಠೋರ ಮನಸ್ಥಿತಿಯ ವ್ಯಕ್ತಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಸರಕಾರ, ಪೊಲೀಸ್ ಇಲಾಖೆ ಸರಿಯಾದ ನ್ಯಾಯ ದೊರಕಿಸದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ನುಡಿದರು.

ಇದೇ ಸಂದರ್ಭ ಪಣಂಬೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿ, ಮನವಿಯಲ್ಲಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಮ್ತಾಝ್ ಅಲಿ ನೊಂದ ಅಭಿಮಾನಿ ಬಳಗ ಸುರತ್ಕಲ್ ಇದರ ಮುಖಂಡ ಶರೀಫ್ ಚೊಕ್ಕಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಿಸ್ಬಾಹ್ ನಾಲೆಜ್ ಫೌಂಡೇಶನ್ ಟ್ರಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಪ್ರಸ್ತಾವನೆ ಗೈದರು. ಕಾರ್ಪೊರೇಟರ್ ಸಂಶಾದ್ ಚೊಕ್ಕಬೆಟ್ಟು, ಇರ್ಫಾನ್ ಚೊಕ್ಕಬೆಟ್ಟು, ಮಿಸ್ಬಾ ಕಾಲೇಜಿನ ಪ್ರಾಂಶುಪಾಲೆ ಝಾಹಿದಾ ಜಲೀಲ್ ಮೊದಲಾದವರು ಉಪಸ್ಥಿತರಿದ್ದರು. ಶಂಸುದ್ದೀನ್ ಬಳಕುಂಜೆ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments