ಹೊರ ರಾಜ್ಯ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ-  ಎ.ಸಿ.ವಿನಯ್ ರಾಜ್

Spread the love

ಹೊರ ರಾಜ್ಯ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ-  ಎ.ಸಿ.ವಿನಯ್ ರಾಜ್

ಮಂಗಳೂರು: ಹೊರ ರಾಜ್ಯ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎ.ಸಿ. ವಿನಯ್ ರಾಜ್ ಆರೋಪಿಸಿದ್ದಾರೆ.

ದ.ಕ.ಜಿಲ್ಲೆಯ ಮುಖ್ಯ ಆರ್ಥಿಕ ಚಟುವಟಿಕೆಯಲ್ಲಿ ಮೊದಲನೆಯ ಸಾಲಿನಲ್ಲಿ ಕಟ್ಟಡ ಕಾಮಗಾರಿ ಮತ್ತು ಹೊಟೇಲ್ ಉದ್ಯಮ ಈ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಶೇ.90 ಜನ ಹೊರ ರಾಜ್ಯ ದವರು. ದ.ಕ ಜಿಲ್ಲೆಯ ಆರ್ಥಿಕತೆಗೆ ಈ ಕಾರ್ಮಿಕ ವರ್ಗದ ಕೊಡುಗೆ ಅಪಾರ. ಕೊರೋನಾ ಲಾಕ್ ಡೌನ್ ಘೋಷಣೆಮಾಡುವ ಮುಂಚೆಯೇ ಈ ಕಾರ್ಮಿಕ ವರ್ಗವನ್ನು ಅವರವರ ಊರಿಗೆ ಹೋಗಲು ಸರಕಾರ ಸಮಯಾವಕಾಶ ಕೊಡುತ್ತಿದ್ದಲ್ಲಿ ಅವರ ಖರ್ಚಿನಲ್ಲಿ ಅವರು ಹೋಗುತ್ತಿದ್ದರು. ಈ ಸಂಧರ್ಭದಲ್ಲಿ ಅವರಲ್ಲಿ ಅವರ ದುಡಿಮೆಯ ಹಣ ಅವರ ಬಳಿ ಇತ್ತು. ಸರಕಾರ ಈ ರೀತಿ ಮಾಡದೆ ಏಕಾಏಕಿ ಲಾಕ್ ಡೌನ್ ಮಾಡಿದ ಕಾರಣ ಸುಮಾರು 45 ದಿನಗಳಿಂದ ಯಾವುದೇ ಆದಾಯವಿಲ್ಲದೆ ದಿನಸಿ ವಸ್ತುಗಳನ್ನು ಖರೀದಿಸಲು ಕೂಡಾ ಹಣವಿಲ್ಲದೇ 3 ಹೊತ್ತಿನ ಊಟಕ್ಕೆ ಈ ಕಾರ್ಮಿಕ ವರ್ಗ ಪರದಾಡುತ್ತಿದೆ.

ಸುಮಾರು ಮೂರು ದಿವಸದ ಹಿಂದೆ ಜಿಲ್ಲಾಡಳಿತ ಹೊರ ರಾಜ್ಯಗಳಿಗೆ ಹೋಗುವ ಕಾರ್ಮಿಕರು ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿಕೊಡಬೇಕೆಂದು ಮಾಧ್ಯಮಗಳ ಮೂಲಕ ತಿಳುವಳಿಕೆ ನೀಡಿರುತ್ತದೆ.ಈ ಕಾರ್ಮಿಕ ವರ್ಗ ಆದಾಯವಿಲ್ಲದೇ ಇರುವ ಈ ಸಂದರ್ಭದಲ್ಲಿ ಅವರ ತವರಿಗೆ ಹೋಗಲು ಪ್ರಯಾಣ ವೆಚ್ಚವನ್ನು ಭರಿಸಿ ಪ್ರಯಾಣ ಮಾಡಬೇಕೆಂದು ಸರಕಾರ ಹೇಳಿರುವುದು ಖಂಡನೀಯ ಮಾತ್ರವಲ್ಲದೇ ಕಾರ್ಮಿಕ ವರ್ಗಕ್ಕೆ ಮಾಡುವ ಅನ್ಯಾಯವಾಗಿದೆ. ಕಟ್ಟಡ ಕಾಮಗಾರಿಗೆ ಅನುಮತಿ ನೀಡುವ ಸಂದರ್ಭ ಕಟ್ಟಡ ಮಾಲೀಕರಿಂದ ಕಾರ್ಮಿಕ ಕಲ್ಯಾಣ ನಿಧಿ ಸರಕಾರ ಕಟ್ಟಸಿಕೊಳ್ಳುತ್ತಿದ್ದು ಆ ಹಣವನ್ನಾದರೂ ಸರಕಾರ ಕಾರ್ಮಿಕರ ಪ್ರಯಾಣ ವೆಚ್ಚಕ್ಕೆ ಉಪಯೋಗಿಸಬಹುದಿತ್ತು.

ಈ ಕಾರ್ಮಿಕ ವರ್ಗಕ್ಕೆ ತಮ್ಮ ಆಡು ಭಾಷೆ ಬಿಟ್ಟು ಆಂಗ್ಲ ಮತ್ತು ಕನ್ನಡ ಭಾಷೆ ತಿಳಿದಿರುವುದಿಲ್ಲ. ಇದರಿಂದ ಆನ್ ಲೈನ್ ಅರ್ಜಿ ಭರ್ತಿ ಮಾಡಲು ಪರದಾಡುತ್ತಿದ್ದಾರೆ. ಹೆಚ್ಚಿನ ಕಾರ್ಮಿಕರಲ್ಲಿ ಅಂಡ್ರಾಯ್ಡ ಫೋನ್ ಇಲ್ಲದೇ ಅರ್ಜಿ ಭರ್ತಿ ಮಾಡಲು ಕಷ್ಟಪಡುತ್ತಿದ್ದಾರೆ. ಜಿಲ್ಲಾಡಳಿತ ಹೇಳಿದಂತಹಾ ಕಛೇರಿಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಆನ್ ಲೈನ್ ಅರ್ಜಿ ಹಾಕಲು ಜಮಾಯಿಸಿದ್ದು ಸಾಮಾಜಿಕ ಅಂತರ ಕಾಯ್ದುಕೊಳಯಳ್ಳುವಲ್ಲಿ ನಿರ್ದೇಶನ ನೀಡಲು ಅಥವಾ ಅರ್ಜಿ ಭರ್ತಿ ಮಾಡಲು ಯಾವುದೇ ಅಧಿಕಾರಿಗಳನ್ನು ನೇಮಿಸಿರುವುದಿಲ್ಲ. ನೋಡಲ್ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಇತರ ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಮೂರು ದಿನಗಳಿಂದ ಮನಪಾ ಕಛೇರಿಗಳ ಮುಂದೆ ಸಾವಿರಗಟ್ಟಲೆ ವಲಸೆ ಕಾರ್ಮಿಕರು ನೊಂದಾವಣೆಗೆ ಕಾದು ಕುಳಿತಿದ್ದು ಇವರಿಗೆ ಕಡೇಯ ಪಕ್ಷ ಅನ್ನ ನೀರನ್ನೂ ಕೂಡಾ ಕೊಡುವಂತ ಸೌಜನ್ಯ ಸ್ಥಳೀಯ ಶಾಸಕರಾಗಲೀ ಅಧಿಕಾರಿಗಳಾಗಲೀ ತೋರಿಸಿಲ್ಲ ಹಾಗೂ ಈ ಕಾರ್ಮಿಕ ರನ್ನು ಅಮಾನವೀಯವಾಗಿ ಕಾಣುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮೂರು ದಿವಸದಿಂದ ಆನ್ ಲೈನ್ ಸರ್ವರ್ ಡೌನ್ ಎಂದು ಹಾರಿಕೆಯ ಉತ್ತರವನ್ನು ಅಧಿಕಾರಿಗಳು ಕೊಟ್ಟು ವಾಪಾಸು ಅವರ ವಾಸ ಸ್ಥಳಕ್ಕೆ ಹೋಗುವಂತೆ ತಿಳಿಸುತ್ತಾ ಬಂದಿರುತ್ತಾರೆ. ಮಂಗಳೂರು ಒನ್‍ನಲ್ಲಿ ಕೂಡಾ ಅರ್ಜಿ ಹಾಕಲು ಜಿಲ್ಲಾಡಳಿತ ಅವಕಾಶ ನೀಡಿದ್ದರೂ ಮಂಗಳೂರು ನಗರದ ಎಲ್ಲಿಯೂ ಕೂಡಾ ಮಂಗಳೂರು ಒನ್ ಕಛೇರಿ ತರೆದಿರುವುದಿಲ್ಲ. ಜಿಲ್ಲಾಡಳಿತ ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು, ಅಲ್ಲದೇ ಸಂಸದರೂ ಕೂಡಾ ಈ ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷವನ್ನು ತೋರಿದ್ದಾರೆ.

 ಕೊರೋನಾ ಭಾದಿತರ ಶವ ಸಂಸ್ಕಾರವನ್ನು ನಗರದಲ್ಲಿ ಮಾಡಬಾರದೆಂದು ಊರಿನ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದ ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಭರತ್ ಶೆಟ್ಟಿ ಯವರು ಸೌಜನ್ಯಕ್ಕಾದರೂ ಈ ಕಾರ್ಮಿಕ ವರ್ಗದ ಸಮಸ್ಯೆ ಬಗ್ಗೆ ಮಾತನಾಡದೇ ಈ ಸಮಸ್ಯೆ ಬಗ್ಗೆ ಪರಿಹರಿಸಲು ಶ್ರಮಿಸದೇ ಇರುವುದು ಖಂಡನೀಯ. ಈ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.


Spread the love